ಶಿಕ್ಷಣವೇ ಶಕ್ತಿ

Friday 25 December 2020

ಭಾರತದ ಮಹಾನ್ ವಿಜ್ಞಾನಿಗಳು

ಭಾರತದ ಮಹಾನ್ ವಿಜ್ಞಾನಿಗಳು


ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ).
 ಆರ್ಯಭಟ ತನ್ನ ಮುಖ್ಯ ಕೃತಿಯಾದ "ಆರ್ಯಭಟೀಯ"ದಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). 


1. ಖಗೋಳಶಾಸ್ತ್ರದ ಸ್ಥಿರ ಸ೦ಖ್ಯೆಗಳು (astronomical constants) ಮತ್ತು ತ್ರಿಕೋನಮಿತಿಯ ಬಗ್ಗೆ ಆರ್ಯಭಟನ ಫಲಿತಾ೦ಶಗಳು
2. ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ಅಗತ್ಯವಾದ ಗಣಿತ
3. ಕಾಲದ ವಿ೦ಗಡಣೆ ಮತ್ತು ಗ್ರಹಗಳ ರೇಖಾ೦ಶಗಳನ್ನು ಲೆಕ್ಕ ಹಾಕಲು ಬೇಕಾದ ಸಿದ್ಧಾ೦ತಗಳು
4. ತ್ರಿಕೋನಮಿತಿ ಮತ್ತು ಗ್ರಹಣಗಳನ್ನು ಲೆಕ್ಕ ಹಾಕಲು ಬೇಕಾದ ಫಲಿತಾ೦ಶಗಳು.


ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ "ಆರ್ಯಭಟ-ಸಿದ್ಧಾ೦ತ"ದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: "ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ." ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು.

ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.


ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ
ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. 

ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲ್ ಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ.


ಲೀಲಾವತಿ ಗಣಿತ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
ಬೀಜಗಣಿತ
ಸಿದ್ಧಾಂತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ:
ಗೋಳಾಧ್ಯಾಯ
ಗ್ರಹಗಣಿತ.

ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ.ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.


ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು.
ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'.

ತಮ್ಮ ೧೨ ನೆ ವಯಸ್ಸಿನಲ್ಲೇ 'ಮೆಟ್ರಿಕ್ಯುಲೆಶನ್' ಮುಗಿಸಿದರು.
'ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ಬಿ.ಎಸ್ಸಿ(೧೯೦೪) ಪದವಿ,
ಎಂ.ಎಸ್ಸಿ (೧೯೦೭) ಪದವಿಗಳನ್ನು ಗಳಿಸಿದರು.
೧೯೦೭ರಲ್ಲಿ 'ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ 'ಕಲ್ಕತ್ತೆ'ಯಲ್ಲಿ 'ಡೆಪ್ಯುಟಿ ಅಕೌಂಟೆಂಟ್ ಜನರಲ್' ಆಗಿ ವೃತ್ತಿ-ಜೀವನ ಆರಂಭಿಸಿದರು, 
ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.

೧೯೧೭ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯ'ರಾದರು.

೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು.


ರಾಮನ್ ಎಫೆಕ್ಟ್ : 


ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು.

 “ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ  ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ. 

ಒಬ್ಬ ಭಾರತೀಯ ಖಭೌತಿಕ ವಿಜ್ಞಾನಿಯಾಗಿದ್ದು, ಆತ ಸಹಾ ಸಮೀಕರಣವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸಮೀಕರಣವನ್ನು ನಕ್ಷತ್ರಗಳಲ್ಲಿ ರಾಸಾಯನಿಕ ಮತ್ತು ಭೌತಿಕ ಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ.
ಆರಂಭಿಕ ಜೀವನ
ಅಕ್ಟೋಬರ್ ೬,೧೮೯೩ರಲ್ಲಿ ಬಂಗಾಲದ ಢಾಕಾಜಿಲ್ಲೆಯ ಶಿಯೋರಟೋಲಿ ಎಂಬ ಹಳ್ಳಿಯಲ್ಲಿ ಜನಿಸಿದರು.ಬಡ ಕುಟುಂಬದಲ್ಲಿ ಜನಿಸಿದ, ಅಸಾಧಾರಣ ಬುದ್ಧಿವಂತರಾದ ಅವರಿಗೆ ಮಾಧ್ಯಮಿಕ ಶಾಲೆಯಲ್ಲೇ ವಿದ್ಯಾರ್ಥಿ ವೇತನವೂ ದೊರೆತು,೧೯೦೯ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ,ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಅಧ್ಯಾಪಕರಾದರು.

ಮೇಘನಾದ ಸಾಹ ಬೆಳಕಿನ ಒತ್ತಡವನ್ನು ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದರು.

ವಿಜ್ಞಾನಿ ಐನ್ ಸ್ಟೀನ್ ರವರ 'ಬೆಳಕಿಗೂ ಭಾರವಿದೆ'ಎಂಬ ವಿಷಯವನ್ನು ಪ್ರಯೋಗಗಳಿಂದ ದೃಢೀಕರಿಸಿದರು.

ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆ ಹಚ್ಚಲು 'ಸೂರ್ಯನ ಶಾಖಕ್ಕೆ ಪರಮಾಣುಗಳು ಒಡೆಯುತ್ತವೆ'ಎಂಬ ತತ್ವವನ್ನು ತಮ್ಮ ೨೭ನೇ ವಯಸ್ಸಿನಲ್ಲೇ ಪ್ರಯೋಗ ಮಾಡಿ ತೋರಿಸಿದರು.

ತಮ್ಮ ಸಾಧನೆಗಳಿಂದಾಗಿ ಯೂರೋಪು,ಜರ್ಮನಿಗೆ ಹೋಗಿ ಬಂದರು.

ಅಲಹಾಬಾದಿನಲ್ಲಿ ರೇಡಿಯೋ ತರಂಗಗಳ ಬಗ್ಗೆ ಅಧ್ಯಯನ ನಡೆಸಿದರು.

ನ್ಯೂಕ್ಲಿಯರ್ ಭೌತವಿಜ್ಞಾನ ಹಾಗೂ ಜೀವ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ೧೯೫೦ರಲ್ಲಿ ಕಲ್ಕತ್ತಾದಲ್ಲಿ 'ಸಾಹ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್'ಎಂಬ ಸಂಸ್ಥೆ ಸ್ಥಾಪನೆಯಾಯಿತು.

ವೈಜ್ಞಾನಿಕ ವಿಷಯಗಳ ತಿಳಿವಳಿಕೆಗಾಗಿ 'ಸೈನ್ಸ್ ಅಂಡ್ ಕಲ್ಚರ್'ಎಂಬ ಪತ್ರಿಕೆಯನ್ನು ನಡೆಸಿದರು.

ಮೇಘನಾದ ಸಾಹ ಅವರಿಗೆ ವಿಜ್ಞಾನವಲ್ಲದೆ ಹಿಂದೂಧರ್ಮ,ಇತಿಹಾಸ,ಸಂಸ್ಕೃತಿಗಳಲ್ಲಿ ಅಪಾರವಾದ ಆಸಕ್ತಿ ಇತ್ತು.

೧೯೫೧ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

೧೯೫೬ರ ಫೆಬ್ರುವರಿ ೬ರಂದು ದೆಹಲಿಯ ಸಂಸತ್ ಭವನಕ್ಕೆ ನಡೆದು ಬರುತ್ತಿದ್ದಾಗಲೇ ಕುಸಿದು ಬಿದ್ದು ತೀರಿಕೊಂಡರು.

ಉಜ್ಜಯಿನಿಯಲ್ಲಿ ಜನಿಸಿದ ಇವನು ಒಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರನು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದನು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದನು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬ.

'ಪಂಚ ಸಿದ್ಧಾಂತಿಕ'-ಇದು ವರಾಹಮಿಹಿರ ರಚಿಸಿದ ಮುಖ‍್ಯ ಸಿದ್ಧಾಂತಗಳಲ್ಲೊಂದು.ಇದು ಸೂರ್ಯಸಿದ್ಧಾಂತ,ರೋಮಕಸಿದ್ಧಾಂತ,ಪೌಲಿಸಸಿದ‍್ಧಾಂತ,ವಸಿಷ್ಠಸಿದ್ಧಾಂತ,ಪೈತಾಮಹಸಿದ್ಧಾಂತ ಹಾಗೂ ಖಗೋಳ ಶಾಸ್ತ್ರದ ಎಲವು ತುಣುಕುಗಳನ್ನು ಹೊಂದಿದೆ. 

ಸುಮಾರು ೧೫೦೦ ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣ ಇದೆ ಎಂದು ಹೇಳಿದ್ದ. ಆಕಾಶ, ಸೂರ್ಯ,ಚಂದ್ರ,ನಕ್ಷತ್ರಗಳೆಲ್ಲ ದೇವರುಗಳೆಂದು ಪೂಜಿಸುತ್ತಿದ್ದ ಕಾಲದಲ್ಲಿ ಅವರಲ್ಲಾ ಸೃಷ್ಟಿಯ ಕೊಡುಗೆ ಎಂದು ಸಾರಿ ಹೇಳಿದ. 

ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ,ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ. ೫೧೨ನೇ ಇಸವಿಯಲ್ಲಿ ಅಂದರೆ ತನ್ನ ೧೩ನೇ ವಯಸ್ಸಿನಲ್ಲಿ 'ಸೂರ್ಯಸಿದ್ಧಾಂತ' ಬರೆದ. ಇದರಲ್ಲಿ ನಕ್ಷತ್ರ ಮಂಡಲ, ಊರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳ ಕುರಿತು ವಿವರಿಸಿದ. ಗಣಿತದ ತ್ರಿಕೋಣಮಿತಿ ನಿಯಮ ಹಾಗು 'ಜ್ಯಾ' ಮಾನದ ಸರಣಿಯನ್ನೂ ಆರಂಭಿಸಿದ. ಇದಲ್ಲದೇ ಈತ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೊಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ. ಇವನ ಕಾಲದಲ್ಲಿ ಉಜ್ಜಯಿನ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧನೆಗಳು ಆರಂಭವಾಗಿದ್ದಉ. ಇವನ ನಂತರ ಬಂದ ಆರ್ಯಭಟ ಇದನ್ನು ಮುಂದುವರಿಸಿ ಆಧುನಿಕ ಗಣಿತದ ರೂವಾರಿಯಾದ. ಇವನು ಮೊತ್ತ ಮೊದಲ ಜಲವಿಜ್ಞಾನಿಯೂ ಹೌದು. ಮಳೆ, ಅಂತರ್ಜಲದ ಮಟ್ಟ, ಈರಿನ ಒಳಹರಿಉ, ಭೂಜಲವನ್ನು ಗುರುತಿಸುಉದು, ಮಣ್ಣಿನ ಗುಣಮಟ್ಟದಿಂದ ನೀರಿನ ಪ್ರಮಾಣ ಅಳೆಯುಉದು, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ನೀರು ಹರಿಯುತ್ತದೆ, ಪ್ರವಾಹ ತಡೆ, ಬರಪರಿಹಾರಕ್ಕೆ ಮಾರ್ಗೋಪಾಯಳ ಬಗ್ಗೆ ಕೂಡ ಹೇಳಿದ್ದಾನೆ.

ಬೃಹತ್ ಸಂಹಿತ-ಇದೂ ವರಾಹಮಿಹಿರನ ಕೊಡುಗೆಗಳಲ್ಲೊಂದು.ಇದು ಜ್ಯೊತಿಷ್ಯ,ಗ್ರಹಗಳ ಚಲನೆ,ಗ್ರಹಣ,ಮೋಡ,ಮಳೆ,ಶಿಲ್ಪಕಲೆ,ಬೆಳೆಗಳ ಬೆಳವಣಿಗೆ,ಸುಗನಧ ದ್ರವ್ಯಗಳ ತಯಾರಿಕೆ,ಮದುವೆ,ಮುತ್ತು,ರತ್ನ ಹಾಗೂ ಸಂಪ್ರದಾಯದ ವಿಷಯಗಳನ್ನೊಳಗೊಂದಿದೆ.ಬೃಹತ್ ಜಟಕ,ಲಘುಜತಕ,ಸಮಾಸ ಜಟಕ,ಬೃಹತ್ ಯೋಗಯಾತ್ರ,ಯೋಗಯಾತ್ರ,ಟಿಕ್ಕಾಣಿ ಯಾತ್ರ,ಬೃಹತ್ ವಿವಾಹ ಪತಲ್,ಲಘು ವಿವಾಹ ಪತಲ್,ಲಗ್ನ ವರಾಹಿ,ಕುತೂಹಲ ಮಂಜರಿ,ದೈವಜ್ಞ ವಲ್ಲಭ ಇವು ವರಾಹಮಿಹಿರ ಬರೆದ ಜ್ಯೋತಿಷ‍್ಯ ಶಾಸ್ತ್ರಗಳು.ತ್ರಿಕೋನಮಿತೀಯಕ್ಕೆ ಇವನ ಕೊಡುಗೆಗಳು ಅಪಾರ.

(8 ಜನವರಿ 1942 - 14 ಮಾರ್ಚ್ 2018) ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಥಿಯರಿಟಿಕಲ್ ಕಾಸ್ಮಾಲಜಿ ಸೆಂಟರ್ನಲ್ಲಿ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ, ವಿಶ್ವವಿಜ್ಞಾನಿ.
ಜೀವನ
ಸ್ಟೀಫನ್ ಹಾಕಿಂಗ್ ಜನಿಸಿದ್ದು ಜನವರಿ 8, 1942ರಂದು. 1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್.
ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದರು.
ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ನಲವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು. ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು, ಅವರು ಸದಾಕಾಲವೂ ಗಾಲಿಕುರ್ಚಿಯ ಮೇಲೆಯೇ ಇರಬೇಕಾಗಿತ್ತು. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳಸಬೇಕಿತ್ತು.
ಸಾಧನೆ 

ಅವರ ವೈಜ್ಞಾನಿಕ ಕೃತಿಗಳು ಸಾಮಾನ್ಯ ಸಾಪೇಕ್ಷತೆಯ ಚೌಕಟ್ಟಿನಲ್ಲಿನ ಗುರುತ್ವ ಏಕತ್ವ ಪ್ರಮೇಯಗಳ ಮೇಲೆ ರೋಜರ್ ಪೆನ್ರೋಸ್ ಸಹಯೋಗದೊಂದಿಗೆ ಮತ್ತು ಕಪ್ಪು ಕುಳಿಗಳು ವಿಕಿರಣವನ್ನು ಹೊರಸೂಸುವ ಸೈದ್ಧಾಂತಿಕ ಭವಿಷ್ಯವನ್ನು ಸಾಮಾನ್ಯವಾಗಿ ಹಾಕಿಂಗ್ ವಿಕಿರಣ ಎಂದು ಕರೆಯಲಾಗುತ್ತಿತ್ತು.
ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಒಕ್ಕೂಟವು ವಿವರಿಸಿರುವ ವಿಶ್ವವಿಜ್ಞಾನದ ಸಿದ್ಧಾಂತವನ್ನು ಮೊದಲ ಬಾರಿಗೆ ಹಾಕಿಂಗ್ ರಚಿಸಿದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ನ ಅನೇಕ-ಲೋಕಗಳ ವ್ಯಾಖ್ಯಾನದ ಹುರುಪಿನ ಬೆಂಬಲಿಗರಾಗಿದ್ದರು. 
ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಜೀವಮಾನದ ಸದಸ್ಯರಾಗಿದ್ದ ರಾಯಲ್ ಸೊಸೈಟಿ ಆಫ್ ಆರ್ಟ್ಸ್ (FRSA) ನ ಗೌರವಾನ್ವಿತ ಫೆಲೋ ಆಗಿದ್ದರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಧ್ಯಕ್ಷೀ8ಯ ಪದಕ ಸ್ವಾತಂತ್ರ್ಯದ ಸ್ವೀಕರಿಸುವವರಾಗಿದ್ದರು.
ನಿಧನ
ವಿಜ್ಞಾನದ ವಿಸ್ಮಯರೆಂದೆನಿಸಿದ್ದ, ಆಲ್ಬರ್ಟ್ ಐನ್ ಸ್ಟೈನ್ ನಂತರದ ಮಹಾನ್ ಭೌತವಿಜ್ಞಾನಿ ಎನಿಸಿದ್ದ ಸ್ಟೀಫನ್ ಹಾಕಿಂಗ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.

'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಇನ್ನು ನೆನಪು ಮಾತ್ರ. ರಾಷ್ಟ್ರಪತಿಯಾದರೂ ಜನಸಾಮಾನ್ಯರ ಜೊತೆ ಬೆರೆತು, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅಬ್ದುಲ್ ಕಲಾಂ ಅವರ ಸರಳ ಬದುಕು ಹಲವಾರು ಎಲ್ಲರಿಗೂ ಮಾದರಿ.

ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್‌ ಪಕೀರ್‌ ಜೈನುಲಾಬ್ದಿನ್‌ ಅಬ್ದುಲ್‌ ಕಲಾಂ. ಕಲಾಂ 1931ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿದರು. ತಂದೆ ಮೀನುಗಾರಿಕಾ ಬೋಟ್ ಇಟ್ಟುಕೊಂಡಿದ್ದರು. ತಾಯಿ ಗೃಹಿಣಿ, ಮನೆಯಲ್ಲಿ ಬಡತನವಿತ್ತು. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ']

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಅಬ್ದುಲ್ ಕಲಾಂ ರಾಮೇಶ್ವರದಲ್ಲಿಯೇ ಪೂರ್ಣಗೊಳಿಸಿದರು. ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಕಲಾಂ ಅವರು ಇಸ್ರೋ ಮತ್ತು ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸಿದರು.
ಜು.1980ರಲ್ಲಿ ಭಾರತದ ಮೊದಲ ಉಪಗ್ರಹ ರೋಹಿಣಿಯನ್ನು ಕಕ್ಷೆ ಸೇರಿದಾದ ಅದರ ಹಿಂದೆ ಅಬ್ದುಲ್ ಕಲಾಂ ಅವರ ಶ್ರಮವಿತ್ತು. ಇಸ್ರೋದ ಪಿಎಸ್‌ಎಲ್‌ವಿ ಕಾರ್ಯಯೋಜನೆಯ ರೂವಾರಿ ಕಲಾಂ. ಡಿಆರ್‌ಡಿಒದಲ್ಲಿ ಸ್ವದೇಶೀ ತಂತ್ರಜ್ಞಾನದ ಕ್ಷಿಪಣಿ ತಯಾರಿಸುವ ತಂಡದ ಮುಖ್ಯಸ್ಥರಾಗಿದ್ದರು.
ಅಬ್ದುಲ್ ಕಲಾಂ 1992ರಿಂದ 1999ರ ವರೆಗೆ ರಕ್ಷಣಾ ಸಚಿವರ ಸಲಹೆಗಾರರಾಗಿದ್ದರು. ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆಗೂ ಕಲಾಂ ಅವರ ಕೊಡುಗೆ ಅಪಾರವಾಗಿದೆ.
ಅಬ್ದುಲ್ ಕಲಾಂ ಭಾರತದ 11ನೇ ರಾಷ್ಟ್ರಪತಿಯಾಗಿ ಜುಲೈ 22, 2002ರಂದು ಆಯ್ಕೆಯಾದರು. ಲೇಖಕರಾಗಿದ್ದ ಕಲಾಂ ಅವರು 'ವಿಂಗ್ಸ್ ಆಫ್ ಫೈರ್' ಸೇರಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೀವನದ ಬಗ್ಗೆ ಅಬ್ದುಲ್ ಕಲಾಂ ಅವರು ಹೇಳಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿವೆ.

ಕಲಾಂ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 1981ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ, 1997ರಲ್ಲಿ ದೇಶದ ಅತ್ಯುನ್ನುತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಸುಮಾರು ಮೂವತ್ತು ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.
ನಿನ್ನ 

ಭಾರತದ ಪ್ರಸಿದ್ಧ ಖಗೋಳ ವಿಜ್ಞಾನಿ.
ಇವರು ಜುಲೈ ೧೯,೧೯೩೮ ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು.ಇವರ ತಂದೆ ವಿ.ವಿ.ನಾರ್ಳಿಕರ್ ಪ್ರಸಿದ್ಧ ಗಣಿತಜ್ಞ.ತಾಯಿ ಸಂಸ್ಕೃತದಲ್ಲಿ ವಿದ್ವಾಂಸೆ
.ಇವರು ಪ್ರೊಫೆಸರ್ ಫ್ರೆಡ್ ಹೋಯ್ಲ್ (Fred Hoyle)ರವರೊಂದಿಗೆ ಪ್ರತಿಪಾದಿಸಿದ ತತ್ವ 'ಹೋಯ್ಲ್ -ನಾರ್ಲಿಕರ್ ಥಿಯರಿ'ಎಂದು ಪ್ರಸಿದ್ಧವಾಗಿದೆ. 
ಇವರಿಗೆ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ, ಪದ್ಮ ವಿಭೂಷಣಪ್ರಶಸ್ತಿ ದೊರೆತಿದೆ.ಇವರು ಹಲವಾರು ಲೇಖನ,ವೈಜ್ಞಾನಿಕ ಬರಹ,ಕಥೆಗಳ ಮೂಲಕ ಜನರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಪ್ರಯತ್ನಶೀಲರಾಗಿದ್ದಾರೆ.

ಜಿ. ಮಾಧವನ್ ನಾಯರ್ (ಹುಟ್ಟು: ಅಕ್ಟೋಬರ್ ೩೧, ೧೯೪೩) ಇಸ್ರೋ ಸಂಸ್ಥೆಯ ಈಗಿನ ಅಧ್ಯಕ್ಷರು.
 ಇವರು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. 
ಅಧ್ಯಕ್ಷರಾಗುವುದಕ್ಕೆ ಮುಂಚೆ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.
ಪ್ರಶಸ್ತಿಗಳು
ರಾಷ್ಟ್ರೀಯ ವೈಮಾನಿಕ ಪ್ರಶಸ್ತಿ, ಎಫ್ಐಎಇ ಫೌಂಡೇಶನ್ನ ಪ್ರಶಸ್ತಿ
, ಶ್ರೀ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ, ಸ್ವದೇಶಿ ಶಾಸ್ತ್ರ ಪುರಸ್ಕಾರ ಪ್ರಶಸ್ತಿ,
 ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಡಾ ಯೆಲವರ್ತಿ ನಾಯುಡಮ್ಮ ಸ್ಮಾರಕ ಪ್ರಶಸ್ತಿ 
, ಐದನೇ "ಶ್ರೀ ಬಲ್ವನ್ಬಾಯ್ ಪಾರೇಖ್ ಪ್ರಶಸ್ತಿ"
 ತಿಲಕ್ ಸ್ಮಾರಕ ಟ್ರಸ್ಟ್ನಿಂದ ಲೋಕಮಾನ್ಯ ತಿಲಕ್ ಪ್ರಶಸ್ತಿ.

ರಘುನಾಥ್ ಅನಂತ ಮಶೇಲ್ಕರ್ ಒಬ್ಬ  ಖ್ಯಾತ ಖಗೋಳ  ವಿಜ್ಞಾನಿಯಾಗಿದ್ದಾರೆ . 

ಇವರು ಗೋವಾದ ಮಾಶೇಲ್ ಎಂಬಲ್ಲಿ  ಜನವರಿ ೧,೧೯೪೩ ಜನಿಸಿದರು.
ಬಾಂಬೆ ವಿಶ್ವವಿದ್ಯಾನಿಲಯದಲ್ಲಿ   (ಈಗ ಇಂಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ)  ಮಷೇಲ್ಕರ್ ಅವರು ಅಧ್ಯಯನ ಮಾಡಿದರು, ಅಲ್ಲಿ  ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು.   ನಂತರ  ಅವರು ಪಿಎಚ್ಡಿ ಪದವಿ ಪಡೆದರು  
ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಸಿಎಸ್‍ಐಆರ್ (CSIR)ನ ಮಾಜಿ ಮುಖ್ಯ ನಿರ್ದೇಶಕರು. 

 ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.

(ಅಕ್ಟೋಬರ್ ೧೯, ೧೯೧೦ - ಆಗಸ್ಟ್ ೨೧, ೧೯೯೫) ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ 'ಚಂದ್ರ' ಎಂದೇ ಸಂಬೋಧಿಸುತ್ತಿದ್ದರು.

೧೯೮೫ ರಲ್ಲಿ 'ಡಾ. ಚಂದ್ರ' ಮತ್ತು ಅಮೆರಿಕಾದ 'ವಿಲ್ಲಿಫೌಲರ್' ಜಂಟಿಯಾಗಿ 'ನೋಬೆಲ್ ಪ್ರಶಸ್ತಿ'ಯನ್ನು ಹಂಚಿಕೊಂಡರು. ವಿಶ್ವದ ಶ್ರೇಷ್ಟ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ 'ಆರ್ಥರ್ ಮಿಲ್ಲರ್' ಹೇಳುವಂತೆ, ಅವರೊಬ್ಬ 'ಖಭೌತ ವಿಜ್ಞಾನಿ'-'ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ'ಯೆಂದು

ಡಾ.ಚಂದ್ರಾರವರು',  ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ ೧೯,೧೯೧೦ ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ 'ಸಹಾಯಕ ಆಡಿಟರ್ ಜನರಲ್' ಆಗಿದ್ದರು.

ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, 'ಟ್ರಿಪ್ಲಿಕೇನ್‌'ನಲ್ಲಿ 'ಹಿಂದೂ ಹೈಸ್ಕೂಲ್' ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಮತ್ತು ಅದ್ಭುತ ನೆನೆಪಿನ ಶಕ್ತಿಯನ್ನು ಹೊಂದಿದ್ದರು. ಅದಕ್ಕೆ ಪುಟವಿಟ್ಟಂಥ ವಿಜ್ಞಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ. 

೧೯೨೫ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. 

೧೯೩೦ರಲ್ಲಿ ಪದವೀಧರರಾದರು. ಇಂಗ್ಲೀಷ್ ಸಾಹಿತ್ಯದಲ್ಲಿ ಅದರಲ್ಲೂ 'ವಿಕ್ಟೋರಿಯನ್ ಯುಗದ ಶೈಲಿಯ ಸುಂದರ-ಇಂಗ್ಲೀಷ್-ಸಾಹಿತ್ಯ'ದಲ್ಲಿ ಅತ್ಯಾಸಕ್ತರು.

ಆಗಿನ ಕಾಲದ ಇಂಗ್ಲೀಷ್ ಭಾಷೆಯ ಪ್ರಕಾಂಡ ಪಂಡಿತರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡ 'ಚಂದ್ರ', ತಮ್ಮ ವೈವಿಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ಆಗಿನ ಕಾಲದ 'ನೋಬೆಲ್ ಪ್ರಶಸ್ತಿ ವಿಜೇತ', 'ಹ್ಯಾನ್ಸ್ ಬೇಥ್' ಹೇಳುವಂತೆ-ಚಂದ್ರಾರವರ ಬರಹವೆಂದರೆ, 'ವಿಕ್ಟೋರಿಯನ್ ಯುಗದ ಸೌಂದರ್ಯ'ವೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿರುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ 'ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ' ಬರೆದಿದ್ದರು.

ಬ್ರಹ್ಮಗುಪ್ತ ಭಾರತದ ಒಬ್ಬ ಮಹಾನ್ ಗಣಿತಶಾಸ್ತ್ರಜ್ಞ,ಖಗೋಳಶಾಸ್ತ್ರ ಹಾಗೂ  ಬೀಜಗಣಿತ ಪ್ರತಿಪಾದಕ. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ ಗಣಿತ ಚಕ್ರ ಚೂಡಾಮಣಿ ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. 

ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು ಚಾಪವಂಶದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ ಜ್ಯೋತಿಷಿಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು ಕರುಣ ಖಂಡ ಸಂಹಿತೆಗಳು ಪ್ರಖ್ಯಾತಿ ಗಳಿಸಿವೆ. 

 


ಇವರು ಶೂನ್ಯ ಬಳಕೆಯ ನಿಯಮವನ್ನ ಪ್ರತಿಪಾದಿಸಿದರು. ಈ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ಸಂಖ್ಯೆಯನ್ನ ಕೂಡಿಸಿದರೆ ಅಥವಾ ಕಳೆದರೆ ಆ ಸಂಖ್ಯೆಯಲ್ಲಿ ಯಾವ ಅಂತರವೂ ಬರುವುದಿಲ್ಲ. ಅಷ್ಟೇ ಅಲ್ಲದೆ ಶೂನ್ಯವನ್ನ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ.

 ಬ್ರಹ್ಮಗುಪ್ತ, ತಮ್ಮ ಬ್ರಹ್ಮ ಸ್ಫುಟ ಸಿದ್ಧಾಂತ ಗ್ರಂಥದಲ್ಲಿ ಜ್ಯೋತಿಷ್ಯ ಹಾಗು ಗಣಿತದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಕಗಣಿತ ಮತ್ತು ಬೀಜಗಣಿತದ ಅಧ್ಯಯಗಳನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. ಇವರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿ ವಿವರಿಸಲಾಗಿದೆ. ಇವರು ಬರೆದ ಕರುಣ ಖಂಡ ಗ್ರಂಥಖಗೋಳ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ. 

ವಿಕ್ರಮ್ ಸಾರಾಭಾಯಿ (೧೨ ಆಗಸ್ಟ್ ೧೯೧೯ - ೨೬ ಡಿಸೆಂಬರ್ ೧೯೭೧) ಭಾರತದ ಖ್ಯಾತ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖರು. 


ಇವರ ಜನನ   ಗುಜರಾತಿನ ಅಹ್ಮದಾಬಾದ್‌ನ ಶ್ರೀಮಂತ ಕುಟುಂಬದಲ್ಲಿ. ತಂದೆ ಅಂಬಾಲಾಲ್ ಸಾರಾಭಾಯ್. ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ  ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ಮುಂತಾದಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತು. 

 ವಿದ್ಯಾಭ್ಯಾಸ :

ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮ್ಮ ೨೦ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬಪರೀಕ್ಷೆಯಲ್ಲಿ ಉತ್ತೀರ್ಣರಾದರು.೧೯೪೭ರಲ್ಲಿ ಕೇಂಬ್ರಿದ್ಜ್‌ನಿಂದ ಪಿಹೆಚ್‌ಡಿ ಪದವಿ ಪಡೆದರು.

 ಸಾಧನೆಗಳು :

ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆಯಲ್ಲಿ ತೊಡಗಿದರು. ವಿಶ್ವ ಕಿರಣಗಳತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನುಕಂಡುಹಿಡಿದು,ಅದರ ಬಗ್ಗೆ ಪ್ರಬಂಧ ಬರೆದು ಪ್ರಕಟಿಸಿದರು.ಈ ವಿಚಾರ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. 

೧೯೬೬ರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ  ನಿಧನ ಹೊಂದಿದಾಗ, ಅವರ ಉತ್ತರಾಧಿಕಾರಿಯಾಗಿನೇಮಕಗೊಂಡವರು ವಿಕ್ರಮ್ ಸಾರಾಭಾಯಿ. ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ಒಳ್ಳೆಯ ಆಡಳಿತಗಾರರೆಂದು ಹೆಸರು ಪಡೆದರು.ಅಧ್ಯಕ್ಷ ಸ್ಥಾನದಲ್ಲಿದ್ದು ಕೊಂಡೇ ಅಹರ್ನಿಶಿ ಸಂಶೋಧನೆಗಳನ್ನು ಮಾಡಿದರು.

ಅಹ್ಮದಾಬಾದಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ,ಕೆಲಕಾಲ ಅದರ ನಿರ್ದೇಶಕರಾಗಿದ್ದರು. ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ವಿಶ್ವಕಿರಣಗಳಸಂಶೋಧನಾ ಕೇಂದ್ರ ಸ್ಥಾಪಿಸಿದರು. ತಮ್ಮ ೪೦ನೇ ವಯಸ್ಸಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಸಿದ ಸಮ್ಮೇಳನವೊಂದರಲ್ಲಿ ಭೌತ ವಿಜ್ಞಾನವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಇಷ್ಟೇ ಅಲ್ಲದೆ ಹಲವು ಸಂಘ,ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವು ಹೀಗಿವೆ:

ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್

ನೆಹರೂ ಫೌಂಡೇಷನ್

ಕಮ್ಯೂನಿಟಿ ಸೈನ್ಸ್ ಸೆಂಟರ್

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಪುರಸ್ಕಾರಗಳು:

೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ

೧೯೬೬-ಪದ್ಮಭೂಷಣ

೧೯೭೨-(ಮರಣೋತ್ತರ) ಪದ್ಮವಿಭೂಷಣ

👍👍👍👍👍👍👍👍👍👍👍👍👍👍

 ಸಂಗ್ರಹ ✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು